ಸುದ್ದಿ ಜಾಲ |
|
|
ಕಳಚಿದ ಬಡಗುತಿಟ್ಟು ಹಾಸ್ಯದ ಕೊಂಡಿ, ಕುಂಜಾಲು ರಾಮಕೃಷ್ಣ ಹಾಸ್ಯಗಾರ್ ಇನ್ನಿಲ್ಲ
ಲೇಖಕರು : ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಶುಕ್ರವಾರ, ಜೂನ್ 13 , 2014
|
ಬಡಗುತಿಟ್ಟು ಹಾಸ್ಯಗಾರಿಕೆಯಲ್ಲಿ ಮನೆಮಾತಾದ, ಪೌರಾಣಿಕ ಹಾಸ್ಯ ಪಾತ್ರಗಳಿಗೆ ತನ್ನದೇ ಶೈಲಿಯಲ್ಲಿ ಜೀವತುಂಬಿ ಕುಂಜಾಲು ಹಾಸ್ಯ ಶೈಲಿ ಎನ್ನುವ ಹೊಸ ಹಾಸ್ಯ ಶೈಲಿಯನ್ನು ಹುಟ್ಟು ಹಾಕಿದ ಅಭಿನವ ಯಕ್ಷಗಾನದ ತೆನ್ನಾಲಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರುತ ಹಾಸ್ಯರಾಜ ಕುಂಜಾಲು ರಾಮಕೃಷ್ಣ ಇನ್ನಿಲ್ಲ.
ಬಡಗುತಿಟ್ಟಿನ ಸಾಂಪ್ರದಾಯದ ಒಲುಮೆಯುಲ್ಲ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೆ ಉಳಿಯುವ ಹೆಸರು ಕುಂಜಾಲು ರಾಮಕೃಷ್ಣರದ್ದು. ತನ್ನ ಪರಂಪರೆಯ ಶೈಲಿಯ ಹಾಸ್ಯದಿಂದ ಸಹಸ್ರಾರು ಪ್ರೇಕ್ಷಕರನ್ನು ಸೆರೆಹಿಡಿದ ಇವರು ರಸಿಕರಿಂದ ಹಾಸ್ಯಚಕ್ರವರ್ತಿ ಎಂಬ ಅನ್ವರ್ಥ ನಾಮ ಪಡೆದವವರು. ಕಳೆದ ಹತ್ತು ವರ್ಷಗಳಿಂದ ಅನಾರೋಗ್ಯದಿಂದ ಹಾಸಿಗೆ ಹಿಡಿದ ಇವರು ಬದುಕಿಗಾಗಿ ಪಟ್ಟ ಬವಣೆ ವರ್ಣಿಸಲಸದಳ. ಸಹಸ್ರಾರು ಪ್ರೇಕ್ಷಕರಿಂದ ಅನುಕಂಪಕ್ಕೆ ಒಳಗಾದ ಇವರಿಗೆ ಸ್ಪಂದಿಸಿದ ಸಂಘ ಸಂಸ್ಥೆಗಳು, ವ್ಯಕ್ತಿಗಳು ಸಾವಿರಾರು ಮಂದಿ.
ಹಾಸ್ಯಪ್ರಿಯರಿಗೆ ತೆನಾಲೀ ಎನ್ನುವಷ್ಟೇ ಪ್ರಸಿದ್ದ ಯಕ್ಷಗಾನ ಹಾಸ್ಯಪ್ರಿಯರಿಗೆ ಕುಂಜಾಲು ಎನ್ನುವ ಹೆಸರು. ಈ ಈರ್ವರು ಮಹನೀಯರು ಹಾಸ್ಯ ಲೋಕಕ್ಕೆ ಕೊಟ್ಟ ಕಾಣಿಕೆ ಅಪಾರ. ಬ್ರಹ್ಮಾವರ ಸಮೀಪದ ಈ ಪುಟ್ಟ ಗ್ರಾಮ ಯಕ್ಷಗಾನ ನಕ್ಷೆಯಲ್ಲಿ ದೊಡ್ದ ಹೆಸರು ಪಡೆಯಲು ಕಾರಣ ಯಕ್ಷಲೋಕದ ಹಾಸ್ಯರಾಜ ಕುಂಜಾಲು ರಾಮಕೃಷ್ಣ ನಾಯಕ್. ಬಡಗುತಿಟ್ಟು ಸಾಂಪ್ರದಾಯದ ಹಾಸ್ಯಪ್ರಿಯರಿಗೆ ಹಾಸ್ಯಗಾರರ ಸಾಲಿನಲ್ಲಿ ಕಂಡುಬರುವ ಅಗ್ರಮಾನ್ಯ ಹೆಸರು ಕುಂಜಾಲಿನವರದ್ದು. ಹಾಸ್ಯ ಪಾತ್ರಗಳಲ್ಲಿ ಗತ್ತು ಗಾಂಬೀರ್ಯವನ್ನು ಸಾದರಪಡಿಸಿ ಸಭ್ಯತೆಯಿಂದ ಸಭಿಕರ ಮನ ಸೂರೆಗೊಂಡ ಕೆಲವೇ ಕೆಲವು ಕಲಾವಿದರಲ್ಲಿ ಕುಂಜಾಲಿನವರೂ ಸಹ ಒಬ್ಬರು. ತನ್ನ ವಿಶಿಷ್ಟ ಧ್ವನಿ, ವೈವಿಧ್ಯಮಯ ಅಂಗಚಲನೆ, ವಿಶಿಷ್ಟವಾದ ಹಾಸ್ಯಭಂಗಿಯಿಂದ ಸುಮಾರು ನಾಲ್ಕು ದಶಕಗಳ ಕಾಲ ಹಾಸ್ಯ ಚಕ್ರವರ್ತಿಯಾಗಿ ಮೆರೆದವರು.
ಹಾಸ್ಯಗಾರರಲ್ಲಿ ಪ್ರಮುಖವಾಗಿ ಎರಡು ವಿಧ. “ಏನಕೇನಾ ಪ್ರಕಾರೇಣ” ಎಂಬಂತೆ ಏನಾದರೂ ಮಾಡಿ ಪ್ರೇಕ್ಷಕರನ್ನು ನಗಿಸಿದರೆ ಸಾಕು ಎಂಬ ಧೋರಣೆಯಿಂದ ಅಶ್ಲೀಲ ನುಡಿಗಳನ್ನು ಆಡುತ್ತಲೇ ಇರುವವರು ಮೊದಲನೇ ವರ್ಗಕ್ಕೆ ಸೇರಿದರೆ, ರಂಗಧರ್ಮವನ್ನು ಮೀರದೇ ಸಭ್ಯತೆಯ ಎಲ್ಲೆ ಮೀರದೆ ಸುಸಂಸ್ಕತವಾಗಿ ತನ್ನ ಪಾತ್ರ ಪೋಷಣೆ ಮಾಡುತ್ತಾ ತನ್ಮೂಲಕ ಪ್ರೇಕ್ಷಕರನ್ನು ಗೆಲ್ಲುವುದಕ್ಕೆ ಯತ್ನಿಸುವವರು ಎರಡನೇ ವರ್ಗ. ಈ ಎರಡನೇ ವರ್ಗಕ್ಕೆ ಸೇರಿದ ಕಲಾವಿದರಲ್ಲಿ ಮುಂಚೂಣಿಯಲ್ಲಿ ಇರುವವರು ಕುಂಜಾಲಿನವರು. ತಾನು ನಗದೇ ಇತರರನ್ನು ನಗಿಸುವುದು ಹಾಸ್ಯ ಕಲಾವಿದರ ಗುಟ್ಟು ಎಂಬುದನ್ನು ಮನಗಂಡು ಹಾಸ್ಯರತ್ನ ಎಂಬ ಕಿರೀಟವನ್ನು ಕಲಾಭಿಮಾನಿಗಳ ಮೂಲಕ ತನ್ನ ಶಿರಕ್ಕೇರಿಸಿಕೊಂಡು ದಕ್ಷೀಣೋತ್ತರ ಕನ್ನಡ ಜಿಲ್ಲೆಗಳಲ್ಲಿ ಮನೆ ಮಾತಾದ ಕಲಾವಿದರಿವರು.
ಕೆರೆಮನೆ ಮಹಾಬಲ ಹೆಗಡೆ, ಶಂಭು ಹೆಗಡೆ, ಗಜಾನನ ಹೆಗಡೆಯೊಂದಿಗೆ ಇವರು ನಿರ್ವಹಿಸಿದ ಹರಿಶ್ಚಂದ್ರದ ನಕ್ಷತ್ರಿಕ, ಉತ್ತರ ಕುಮಾರ, ಭೀಷ್ಮ ವಿಜಯ ಮತ್ತು ದಕ್ಷಯಜ್ಜದ ವೃಧ್ಧ ಬ್ರಾಹ್ಮಣ, ಗದಾಯುಧ್ಧದ ಬೇವಿನಚರ, ಸುಹಾಶಿನಿ ಪರಿಣಯದ ಹೆಡ್ದ ಮುಂತಾದ ಪಾತ್ರಗಳು ಇವರದ್ದೇ ಸೃಷ್ಟಿ ಎನ್ನುವಷ್ಟು ಪ್ರಸಿಧ್ಧಿ ಪಡೆದಿವೆ. ದೀರ್ಘ ಕಾಲ ಉ. ಕದ ಇಡಗುಂಜಿ ಮೇಳದಲ್ಲಿ ತಿರುಗಾಟ ಮಾಡಿದ ಇವರ ಮೇಳದ ತಿರುಗಾಟದಲ್ಲಿ ಬಹುಪಾಲು ತಿರುಗಾಟ ಕೆರೆಮನೆ ಬ೦ಧುಗಳೊಂದಿಗೆ.
ಹೊಸ ಪ್ರಸಂಗಗಳಲ್ಲೂ ಸಹ ಸೈ ಎಣಿಸಿಕೊಂಡ ಇವರು ಶಿರಸಿ ಮೇಳದ ಬಾಗ್ಯ ಭಾರತಿ ಪ್ರಸಂಗದಲ್ಲಿ ತೆಕ್ಕಟ್ಟೆ ಆನಂದ ಮಾಸ್ತರೊಂದಿಗೆ ನಿರ್ವಹಿಸಿದ ಮರ್ತಪ್ಪ- ಚರ್ಡಪ್ಪರ ಜೋಡಿ ವೇಷ ಅಪಾರ ಜನ ಮನ್ನಣೆ ಪಡೆದಿತ್ತು. ಇಡಗುಂಜಿ ಮೇಳದಲ್ಲಿ ದಮಯಂತಿ ಕಲ್ಯಾಣ ಪ್ರಸಂಗದಲ್ಲಿ ಮಹಾಬಲ ಹೆಗಡೆಯವರ ರುತುಪರ್ಣ, ಶಂಭು ಹೆಗಡೆಯವರ ಬಾಹುಕನಿಗೆ ಸಣ್ಣ ಪಾತ್ರವಾದ ಸುದೇವ ಬ್ರಾಹ್ಮಣನಾಗಿ ಇವರ ಅಭಿನಯ ಪ್ರೇಕ್ಷಕರ ಮನಕರಗಿಸುತಿತ್ತು.
ತನ್ನನ್ನು ತಿದ್ದಿ ತೀಡಿದ ಹಿರಿಯ ಕಲಾವಿದರಾದ ವೀರಭದ್ರ ನಾಯಕ್, ವಿಠಲ ಪಾಟೀಲ್, ನಾರ್ಣಪ್ಪ ಉಪ್ಪೂರರನ್ನು ಸದಾ ಸ್ಮರಿಸುವ ಇವರು ಇಂದು ಕಲಾವಿದರಲ್ಲಿ ಒಬ್ಬರು ಇನ್ನೊಬ್ಬರಲ್ಲಿ ಕೇಳುವ ಪರಿಪಾಟ ಹೋಗಿದೆ ಎಂದು ಕಳವಳ ಪಡುತ್ತಾರೆ. ಈ ತಲೆಮಾರಿನ ಕಲಾವಿದರಲ್ಲಿ ಹಳ್ಳಾಡಿ ಜಯರಾಮ ಶೆಟ್ಟರ ದಾರಿ ನನ್ನದೇ ಆಗಿದ್ದು ರಾಜ ಹಾಸ್ಯ ಎಂದು ಪರಿಗಣಿಸಬಹುದು, ಶ್ರುತಿ ಬದ್ದತೆ ಅವರ ಆಸ್ತಿ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇನ್ನೋರ್ವ ಕಲಾವಿದ ರಮೇಶ ಭಂಡಾರಿ ಉತ್ತಮ ಕಲಾವಿದನಾಗಿದ್ದು ಹಿರಿಯ ಕಲಾವಿದ ಸಾಲ್ಕೋಡು ಗಣಪತಿ ಹೆಗಡೆಯವರ ಛಾಯೆಯನ್ನು ಗುರುತಿಸಬಹುದೆಂದು ಸಹ ಕಲಾವಿದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ಕುಂಜಾಲರು ಹಾಸಿಗೆ ಹಿಡಿದಾಗ ಸಂತೈಸಿದ ಸಂಸ್ಥೆಗಳು ಹಲವಾರು. ನೂರಾರು ಸನ್ಮಾನಗಳು ಅವರಿಗೆ ಸಂದಿವೆ. ಉಡುಪಿ ಯಕ್ಷಗಾನ ಕಲಾರಂಗದ ಬಿ. ಬಿ ಶೆಟ್ಟಿ ಪ್ರಶಸ್ತಿ, ಸಾಲಿಗ್ರಾಮ ಮೇಳದ ಪಳ್ಳಿ ಸೋಮನಾಥ ಹೆಗ್ಡೆ ಪ್ರಶಸ್ತಿ, ಇಡಗುಂಜಿ ಮೇಳದ ಶಂಭು ಹೆಗಡೆ ಪ್ರಶಸ್ತಿ, ಮಂದಾರ್ತಿ ಕ್ಷೇತ್ರದ ಪ್ರಶಸ್ತಿ ಅಲ್ಲದೆ ಕಳೆದ ಸಾಲಿನ ಕರ್ನಾಟಕ ರಾಜ್ಯ ಪ್ರಶಸ್ತಿಯೂ ಅವರಿಗೆ ಸಂದಿತ್ತು. ದೂರದ ಅಭಿಮಾನಿಗಳು ಅಂಚೆ ಮೂಲಕ ಹಣ ಕಳುಹಿಸಿದ್ದಾರೆ. ದೂರದ ಬೆಂಗಳೂರು ಹಾಗೂ ಮುಂಬೈ ಮಹಾನಗರದಲ್ಲೂ ಹಲವಾರು ಸನ್ಮಾನಗಳು ಸಂದಿವೆ. ತಾನು ಮೊದಲು ಗೆಜ್ಜೆ ಕಟ್ಟಿದ ಮೇಳದ ಅಧಿದೇವತೆ, ಕೊಲ್ಲೂರು ಮೂಕಾಂಬಿಕೆ, ಕೊನೆಯಲ್ಲಿ. ಗೆಜ್ಜೆ ಬಿಚ್ಚಿದ ಮೇಳದ ಅಧಿದೇವತೆ ಮಂದಾರ್ತಿ ದುರ್ಗಾಪರಮೇಶ್ವರಿ ಅಮ್ಮನವರು ನನ್ನ ಕೈ ಬಿಡಲಿಲ್ಲ ಎಂದು ಸದಾ ತನ್ನ ಸನ್ಮಾನದ ಬಾಷಣದಲ್ಲಿ ಹೇಳುತಿದ್ದ ಅವರ ನಿಧನದಿಂದ ಬಡಗುತಿಟ್ಟು ಹಾಸ್ಯಲೋಕ ಬಡವಾಗಿದೆ.
|
|
|
|
|
|